ಶುಕ್ರವಾರ, ಫೆಬ್ರವರಿ 25, 2022

ರಾಸಾಯನಿಕ ಕ್ರಿಯೆಯ ಗುಣಲಕ್ಷಣಗಳು -ಪರಿಕಲ್ಪನಾ ನಕ್ಷೆ (ಮೈಂಡ್ ಮ್ಯಾಪ್)

ಈ ಲೇಖನವನ್ನು ಮೈಂಡ್ ಮ್ಯಾಪ್ ಬಳಸಿಕೊಂಡು ಬರೆಯಲಾಗಿದೆ. ಮೈಂಡ್ ಮ್ಯಾಪ್ ನ ವೀಕ್ಷಣೆಗಾಗಿ ಇಮೇಜನ್ನು ಕ್ಲಿಕ್ ಮಾಡಿ.

ರಾಸಾಯನಿಕ ಕ್ರಿಯೆ ಎಂದರೇನು?
ರಾಸಾಯನಿಕ ಬಂಧಗಳನ್ನು ಒಡೆಯುವ ಮತ್ತು ಉಂಟುಮಾಡುವ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುತ್ತೇವೆ.
ರಾಸಾಯನಿಕ ಬಂಧ ಎಂದರೇನು?
ವಸ್ತುವಿನ/ಗಳ ಪರಮಾಣುಗಳ ನಡುವೆ ಇಲೆಕ್ಟ್ರಾನುಗಳನ್ನು ಬಿಟ್ಟುಕೊಡುವ ಅಥವಾ ಸ್ವೀಕರಿಸುವ  ಅಥವಾ ಹಂಚಿಕೊಳ್ಳುವುದರಿಂದ ಉಂಟಾಗುವ ಬಂಧವನ್ನು ರಾಸಾಯನಿಕ ಬಂಧ ಎನ್ನುತ್ತೇವೆ.
ಪ್ರತಿವರ್ತಕ ಗಳು ಎಂದರೇನು?
ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ವಸ್ತುಗಳನ್ನು ಪ್ರತಿವರ್ತಕಗಳು ಎನ್ನುತ್ತೇವೆ.
ಉತ್ಪನ್ನಗಳು ಎಂದರೇನು?
ರಾಸಾಯನಿಕ ಕ್ರಿಯೆಯಿಂದ ಉಂಟಾದ ಹೊಸ ವಸ್ತುಗಳನ್ನು ಉತ್ಪನ್ನಗಳು ಎನ್ನುತ್ತೇವೆ.

  ನಾವು ಸಕ್ಕರೆಯನ್ನು ಕಾಯಿಸಿದಾಗ ಅದು ಹೊಸ ವಸ್ತುವಾಗಿ ಅಂದರೆ ಕಾರ್ಬನ್ ಮತ್ತು ನೀರಾವಿ ಗಳಾಗಿ ಬದಲಾಗುತ್ತದೆ.ಈ ಬದಲಾವಣೆಯನ್ನು ನಾವು ರಾಸಾಯನಿಕ ಬದಲಾವಣೆ ಎನ್ನುತ್ತೇವೆ.ಈ ರಾಸಾಯನಿಕ ಬದಲಾವಣೆಗೆ ಕಾರಣವಾದ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುತ್ತೇವೆ. ಇಲ್ಲಿ
ನಾವು ಸಕ್ಕರೆಯನ್ನು ಪ್ರತಿವರ್ತಕ ಎಂದರೆ ಕಾರ್ಬನ್ ಮತ್ತು ನೀರಾವಿ ಗಳನ್ನು ಉತ್ಪನ್ನಗಳು ಎನ್ನುತ್ತೇವೆ.

ರಾಸಾಯನಿಕ ಕ್ರಿಯೆಯ ಗುಣಲಕ್ಷಣಗಳು;
  1)ರಾಸಾಯನಿಕ ಕ್ರಿಯೆಯಲ್ಲಿ ಅನಿಲದ ಬಿಡುಗಡೆಯಾಗುತ್ತದೆ.
ಉದಾಹರಣೆಗೆ ಸೋಡಿಯಂ ಕಾರ್ಬೋನೇಟ್ ಮತ್ತು ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ ಗಳನ್ನು ಸೇರಿಸಿದಾಗ ಸೋಡಿಯಂ ಕ್ಲೋರೈಡ್, ನೀರು ಮತ್ತು ಇಂಗಾಲದ ಡೈಯಾಕ್ಸೈಡ್ ಉಂಟಾಗುತ್ತವೆ.ಇಲ್ಲಿ ಕಾರ್ಬನ್ ಡೈಆಕ್ಸೈಡ್ ಎಂಬುದು ಒಂದು ಅನಿಲವಾಗಿದೆ.
2)ಬಣ್ಣದಲ್ಲಿ ಬದಲಾವಣೆ ;
ಉದಾಹರಣೆಗೆ ಪರ್ಪಲ್ ಬಣ್ಣದ ಪೊಟ್ಯಾಶಿಯಂ ಪರಮಾಂಗನೇಟ್ ಗೆ ನಿಂಬೆರಸವನ್ನು ಸೇರಿಸಿದಾಗ ಅದು ಬಣ್ಣರಹಿತ ದ್ರಾವಣವಾಗುತ್ತದೆ.
3)ಪ್ರಸಿಪಿಟೇಟ್(ಅವಕ್ಷೇಪ) ಉಂಟಾಗುವಿಕೆ;
ಉದಾಹರಣೆಗೆ ದ್ರವೀಯ ಬೇರಿಯಂ ಕ್ಲೋರೈಡ್ ಅನ್ನು ದ್ರವೀಯ ಸಲ್ಫ್ಯೂರಿಕ್ ಆಮ್ಲ ಕ್ಕೆ ಸೇರಿಸಿದಾಗ ಬಿಳಿ ಬಣ್ಣದ ಅವಕ್ಷೇಪವಾದ ಬೇರಿಯಂ ಸಲ್ಫೇಟ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಉಂಟಾಗುತ್ತದೆ.
4)ಸ್ಥಿತಿಯ ಬದಲಾವಣೆ ;
ಉದಾಹರಣೆಗೆ ಮೇಣದ ಬತ್ತಿಯನ್ನು ಸುಟ್ಟಾಗ ಮಸಿ, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳು ಉತ್ಪತ್ತಿಯಾಗುತ್ತವೆ.

ಬುಧವಾರ, ಫೆಬ್ರವರಿ 23, 2022

ಬೆಳಕಿನ ವಕ್ರೀಭವನ -ಪರಿಕಲ್ಪನೆಯ ಮೈಂಡ್ ಮ್ಯಾಪ್

'ಬೆಳಕಿನ ವಕ್ರೀಭವನ ಪರಿಕಲ್ಪನೆಯ  ಮೈಂಡ್ ಮ್ಯಾಪ್' - ಈ ಲೇಖನವನ್ನು ಮೈಂಡ್ ಮ್ಯಾಪ್ ಅನ್ನು ಬಳಸಿಕೊಂಡು ಬರೆಯಲಾಗಿದೆ.

ಬೆಳಕಿನ ವಕ್ರೀಭವನ ಎಂದರೇನು?
ಬೆಳಕಿನ ವಕ್ರೀಭವನವು ಒಂದು ವಿದ್ಯಮಾನ.
ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ಚಲಿಸುವಾಗ ತನ್ನ ಪ್ರಸರಣದ ದಿಕ್ಕನ್ನು ಬದಲಿಸುತ್ತದೆ.ಈ ವಿದ್ಯಮಾನವನ್ನು ಬೆಳಕಿನ ವಕ್ರೀಭವನ ಎನ್ನುತ್ತೇವೆ.

  ಬೆಳಕು ಬೇರೆ ಬೇರೆ ಮಾಧ್ಯಮದಲ್ಲಿ ಬೇರೆ ಬೇರೆ ವೇಗವನ್ನು ಹೊಂದಿರುತ್ತದೆ.ಏಕೆಂದರೆ ಬೇರೆ ಬೇರೆ ಮಾಧ್ಯಮಗಳ ಸಾಂದ್ರತೆ ಬೇರೆ ಬೇರೆಯಾಗಿರುತ್ತದೆ.
ಈ ಕಾರಣದಿಂದ ಮಾಧ್ಯಮದಿಂದ ಮಾಧ್ಯಮಕ್ಕೆ ಬೆಳಕು ಸಾಗುವಾಗ ಅದರ ವೇಗದಲ್ಲಿ ಬದಲಾವಣೆಯಾಗುತ್ತದೆ. ವೇಗ ಬದಲಾವಣೆಯಾದಾಗ ಅದರ ಪ್ರಸರಣದ ದಿಕ್ಕು ಬದಲಾಗುತ್ತದೆ.ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ ಹೆಚ್ಚಾದರೆ,ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪತನ ಬಿಂದುವಿನಲ್ಲಿ ಎಳೆದ ಲಂಬದಿಂದ ದೂರಕ್ಕೆ ಬಾಗುತ್ತದೆ.ಅದೇ ರೀತಿ ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ ಕಡಿಮೆಯಾದರೆ ಅದು ಪತನ ಬಿಂದುವಿನಲ್ಲಿ ಎಳೆದ ಲಂಬದ ಕಡೆಗೆ ಬಾಗುತ್ತದೆ.

ಬೆಳಕಿನ ವಕ್ರೀಭವನದ ನಿಯಮಗಳು ;
I.ಬೆಳಕಿನ ವಕ್ರೀಭವನವಾದಾಗ, ಪತನ ಕಿರಣ,ವಕ್ರಿಮ ಕಿರಣ ಮತ್ತು ಪತನ ಬಿಂದುವಿನಲ್ಲಿ ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಎಳೆದ ಲಂಬ ಇವು 3 ಒಂದೇ ಸಮತಲದಲ್ಲಿ ಇರುತ್ತವೆ.
II.ಪತನಕೋನದ ಸೈನು ಮತ್ತು ವಕ್ರಿಮ ಕೋನದ ಸೈನು ಗಳಿಗೆ ಇರುವ ಅನುಪಾತ ಒಂದು ಸ್ಥಿರಾಂಕ ವಾಗಿರುತ್ತದೆ.
ಇದನ್ನು ಸ್ನೆಲ್ ನ ವಕ್ರೀಭವನದ ನಿಯಮ ಎನ್ನುತ್ತಾರೆ.
       ಈ ಸ್ಥಿರಾಂಕ ವನ್ನು ಒಂದನೇ ಮಾಧ್ಯಮಕ್ಕೆ ಸಂಬಂಧಿಸಿದಂತೆ ಎರಡನೇ ಮಾಧ್ಯಮದ ಸಾಪೇಕ್ಷ ವಕ್ರೀಭವನ ಸೂಚ್ಯಂಕ ಎನ್ನುತ್ತಾರೆ.
ವಕ್ರೀಭವನ ಸೂಚ್ಯಂಕ =ಒಂದನೇ ಮಾಧ್ಯಮದಲ್ಲಿ ಬೆಳಕಿನ ವೇಗ /ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ. ----> n = v1/v2
ಒಂದನೇ ಮಧ್ಯಮವು ಗಾಳಿ ಅಥವಾ ನಿರ್ವಾತ ಆದಾಗ ಎರಡನೇ ಮಧ್ಯಮದ ವಕ್ರೀಭವನ ಸೂಚ್ಯಂಕ n = C/v .
ಇದನ್ನು ಎರಡನೇ ಮಧ್ಯಮದ ನಿರಪೇಕ್ಷ ವಕ್ರೀಭವನ ಸೂಚ್ಯಂಕ ಎನ್ನುತ್ತೇವೆ.
  ಒಂದು ಮಾಧ್ಯಮದ ಅಥವಾ ವಸ್ತುವಿನ ವಕ್ರೀಭವನ ಸೂಚ್ಯಂಕವು ಹೆಚ್ಚಾಗಿದ್ದರೆ ಅದು ಸಾಪೇಕ್ಷವಾಗಿ ದೃಕ್ ಸಾಂದ್ರ ಮಾಧ್ಯಮವಾಗಿರುತ್ತದೆ.ಅದೇ ರೀತಿ ಒಂದು ವಸ್ತುವಿನ  ನಿರಪೇಕ್ಷ ವಕ್ರೀಭವನ ಸೂಚ್ಯಂಕವು ಕಡಿಮೆಯಾಗಿದ್ದರೆ ಅದು ದೃಕ್ ವಿರಳ ಮಾಧ್ಯಮವಾಗಿರುತ್ತದೆ.

ಈ ಲೇಖನವನ್ನು ಮೈಂಡ್ ಮ್ಯಾಪ್ ಅನ್ನು ಬಳಸಿಕೊಂಡು ಬರೆಯಲಾಗಿದೆ.

ಗುರುವಾರ, ಫೆಬ್ರವರಿ 17, 2022

ಬೆಳಕು - ಪರಿಕಲ್ಪನಾ ನಕ್ಷೆ ( ಮೈಂಡ್ ಮ್ಯಾಪ್)

ಬೆಳಕು ಪರಿಕಲ್ಪನೆಯ ಈ ಲೇಖನವನ್ನು ಮೈಂಡ್ ಮ್ಯಾಪ್ ರಚಿಸಿಕೊಂಡು ಬರೆಯಲಾಗಿದೆ.

ಬೆಳಕು ಎಂದರೇನು?
ಬೆಳಕು, ಶಕ್ತಿಯ ರೂಪಗಳಲ್ಲಿ ಒಂದು.
ಬೆಳಕಿನ ಮೂಲಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ ನೈಸರ್ಗಿಕ ಮೂಲಗಳು ಮತ್ತು ಕೃತಕ ಮೂಲಗಳು.
ಬೆಳಕಿನ ನೈಸರ್ಗಿಕ ಮೂಲಗಳಿಗೆ ನಕ್ಷತ್ರಗಳು ಮಿಂಚುಹುಳು ಇತ್ಯಾದಿ ಉದಾಹರಣೆಗಳಾಗಿವೆ.ವಿದ್ಯುತ್ ಬಲ್ಬ್ ಮೇಣದಬತ್ತಿ ಇತ್ಯಾದಿ ಬೆಳಕಿನ ಕೃತಕ ಮೂಲಗಳಿಗೆ ಉದಾಹರಣೆಗಳಾಗಿವೆ.

ಬೆಳಕಿನ ಪ್ರತಿಫಲನ ಎಂದರೇನು?
ಬೆಳಕು ವಸ್ತುವಿನ ಮೇಲೆ ಬಿದ್ದು ಹಿಂದಕ್ಕೆ ಬರುವುದಕ್ಕೆ ಬೆಳಕಿನ ಪ್ರತಿಫಲನ ಎನ್ನುತ್ತೇವೆ.
ಬೆಳಕಿನ ಪ್ರತಿಫಲನ ವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ; ನಿಯತ ಪ್ರತಿಫಲನ ಮತ್ತು ಅನಿಯತ ಪ್ರತಿಫಲನ .
ನಿಯತ ಪ್ರತಿಫಲನವು ಸಮತಲ ಮೇಲ್ಮೈಯಲ್ಲಿ ಉಂಟಾಗುತ್ತದೆ.ನಿಯತ ಪ್ರತಿಫಲನ ವಾದಾಗ ಸ್ಪಷ್ಟ ಪ್ರತಿಬಿಂಬ ಉಂಟಾಗುತ್ತದೆ.ಆದರೆ ಅನಿಯತ ಪ್ರತಿಫಲನವು ಸಮತಲವಾಗಿ ಇಲ್ಲದ ಮೇಲ್ಮೈಯಲ್ಲಿ ಉಂಟಾಗುತ್ತದೆ.ಇಲ್ಲಿ ಪ್ರತಿಬಿಂಬವು ಸ್ಪಷ್ಟವಾಗಿ ಕಾಣುವುದಿಲ್ಲ.

ಬೆಳಕಿನ ಪ್ರತಿಫಲನದ ನಿಯಮಗಳು :
ಬೆಳಕಿನ ಪ್ರತಿಫಲನ ವಾದಾಗ ಎರಡು ನಿಯಮಗಳ ಅನುಸಾರ ಉಂಟಾಗುತ್ತದೆ.
ಅವುಗಳೆಂದರೆ;
I.ಬೆಳಕಿನ ಪ್ರತಿಫಲನ ವಾದಾಗ,ಪತನ ಕಿರಣ, ಪ್ರತಿಫಲನ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬ ಇವು ಮೂರು ಒಂದೇ ಸಮತಲದಲ್ಲಿ ಇರುತ್ತವೆ.
II.ಬೆಳಕಿನ ಪ್ರತಿಫಲನ ವಾದಾಗ ಪತನ ಕೋನವು ಪ್ರತಿಫಲನ ಕೋನಕ್ಕೆ ಸಮವಾಗಿರುತ್ತದೆ.

ದರ್ಪಣ ಎಂದರೇನು?
ನುಣುಪಾದ ಪ್ರತಿಫಲಿಸುವ ಮೇಲ್ಮೈಯನ್ನು ದರ್ಪಣ ಎನ್ನುತ್ತೇವೆ.

ದರ್ಪಣದ ವಿಧಗಳು;
ದರ್ಪಣವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು.ಅವುಗಳೆಂದರೆ;ಸಮತಲ ದರ್ಪಣ ಮತ್ತು ಗೋಳೀಯ ದರ್ಪಣ.ದರ್ಪಣದ ಮೇಲ್ಮೈ ಸಮತಟ್ಟಾಗಿದ್ದರೆ ಅದನ್ನು ಸಮತಲ ದರ್ಪಣ ಎನ್ನುತ್ತೇವೆ.ದರ್ಪಣದ ಮೇಲ್ಮೈ ಗೋಳದ ಭಾಗದಂತಿದ್ದರೆ ಅದನ್ನು ಗೋಳೀಯ ದರ್ಪಣ ಎನ್ನುತ್ತೇವೆ.
ಗೋಳಿಯ ದರ್ಪಣವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು, ಅವುಗಳೆಂದರೆ; ಪೀನ ದರ್ಪಣ ಮತ್ತು ನಿಮ್ನ ದರ್ಪಣ.
ದರ್ಪಣದ ಮೈ ಉಬ್ಬಿದ್ದರೆ ಅದನ್ನು ಪೀನ ದರ್ಪಣ ಎನ್ನುತ್ತೇವೆ.
ದರ್ಪಣದ ಮೈ ತಗ್ಗಾಗಿದ್ದರೆ ಅದನ್ನು ನಿಮ್ನ ದರ್ಪಣ ಎನ್ನುತ್ತೇವೆ.

ಬೆಳಕು ವಸ್ತುವಿನ ಮೇಲೆ ಬಿದ್ದಾಗ ಏನಾಗುತ್ತದೆ?
ಬೆಳಕು ವಸ್ತುವಿನ ಮೇಲೆ ಬಿದ್ದಾಗ ವಸ್ತುವಿನಿಂದ ಹೀರಲ್ಪಡಬಹುದು ಅಥವಾ ವಸ್ತುವಿನ ಮೂಲಕ ಹಾದು ಹೋಗಬಹುದು ಅಥವಾ ಪ್ರತಿಫಲಿಸಬಹುದು.

ಮೈಂಡ್ ಮ್ಯಾಪ್ ಅನ್ನು ಈ ಲೇಖನದೊಂದಿಗೆ ಲಗತ್ತಿಸಲಾಗಿದೆ.

ಮಂಗಳವಾರ, ಫೆಬ್ರವರಿ 15, 2022

ಸಸ್ಯಗಳು- ಪರಿಕಲ್ಪನೆ - 6ನೇ ತರಗತಿ

ಈ ಲೇಖನವನ್ನು ಮೈಂಡ್ ಮ್ಯಾಪನ್ನು ಬಳಸಿ ಬರೆಯಲಾಗಿದೆ.

ಸಸ್ಯಗಳು(plants) ಎಂದರೇನು ?
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಬಲ್ಲ ಜೀವಿಗಳ ವರ್ಗಕ್ಕೆ ಸಸ್ಯಗಳು ಎನ್ನುತ್ತೇವೆ.
<img src="classification of plants.png" alt="mind map explaining the types of plants">



ಸಸ್ಯಗಳನ್ನು ಅವುಗಳ ಕಾಂಡಗಳ  ಆಧಾರದ ಮೇಲೆ ನಾಲ್ಕು ಬಗೆಗಳಾಗಿ ವಿಂಗಡಿಸಲಾಗಿದೆ.
   ಗಿಡ್ಡಗಿರುವ, ಹಸಿರು ಮೃದು ಕಾಂಡವನ್ನು ಹೊಂದಿರುವ ಸಸ್ಯಗಳಿಗೆ ಗಿಡಮೂಲಿಕೆಗಳು(herbs) ಎನ್ನುತ್ತೇವೆ.
  ಮಧ್ಯಮ ಎತ್ತರ, ಸಣ್ಣ, ಗಟ್ಟಿ ಕಾಂಡವನ್ನು ಹೊಂದಿರುವ ಸಸ್ಯಗಳ ಗುಂಪಿಗೆ ಪೊದೆಗಳು(shrubs ) ಎನ್ನುತ್ತೇವೆ.
  ಎತ್ತರವಾಗಿರುವ, ದಪ್ಪ, ಗಟ್ಟಿಯಾದ ಕಾಂಡವನ್ನು ಹೊಂದಿರುವ ಸಸ್ಯಗಳಿಗೆ ಮರಗಳು(trees) ಎನ್ನುತ್ತೇವೆ.
  ದುರ್ಬಲ, ನೇರವಾಗಿ ನಿಲ್ಲಲಾಗದ, ಉದ್ದನೆಯ ಕಾಂಡವಿರುವ ಸಸ್ಯಗಳನ್ನು ಬಳ್ಳಿಗಳು ಎನ್ನುತ್ತೇವೆ.
ನೆಲದ ಮೇಲೆ ಹರಡುವ ಬಳ್ಳಿಗಳನ್ನು ನೆಲಬಳ್ಳಿಗಳು (creepers) ಎಂದರೆ, ಆಧಾರವನ್ನು ಪಡೆದು ಹತ್ತುವ ಬಳ್ಳಿಗಳನ್ನು ಅಡರು ಬಳ್ಳಿಗಳು(climbers) ಎನ್ನುತ್ತೇವೆ.
ಸಸ್ಯದ ಭಾಗಗಳನ್ನು ಗಮನಿಸೋಣ;
 ಸಸ್ಯವು ನಾಲ್ಕು ಪ್ರಮುಖ ಭಾಗಗಳನ್ನು ಒಳಗೊಂಡಿದೆ ಅವುಗಳು; ಎಲೆ, ಬೇರು, ಕಾಂಡ, ಹೂ ಆಗಿವೆ.
ಎಲೆಯು ಎಲೆತೊಟ್ಟು(petiole ) ಮತ್ತು ಪತ್ರಪಟಲ(lamina)ವನ್ನು ಹೊಂದಿದೆ.
ಪತ್ರಪಟಲದಲ್ಲಿರುವ ಗೆರೆಗಳಂತಹ ರಚನೆಗಳನ್ನು ಸಿರೆಗಳು(vein) ಎನ್ನುತ್ತೇವೆ. ಮತ್ತು ಈ ವಿನ್ಯಾಸವನ್ನು ಎಲೆಯ ಸಿರಾ ವಿನ್ಯಾಸ(leaf venation) ಎನ್ನುತ್ತೇವೆ.
ಮಧ್ಯದ ಗೆರೆಯನ್ನು ಮಧ್ಯ ಸಿರೆ(midrib) ಎನ್ನುತ್ತೇವೆ.
ಮಧ್ಯ ಸಿರೆಯ ಎರಡೂ ಕಡೆ ಬಲೆಯ ರೀತಿಯ ವಿನ್ಯಾಸವಿದ್ದರೆ ಅದನ್ನು ಜಾಲಿಕಾ ಸಿರಾ ವಿನ್ಯಾಸ (reticulate venation) ಎನ್ನುತ್ತೇವೆ.
ಮಧ್ಯ ಸಿರೆಯ ಎರಡೂ ಕಡೆ ಸಮಾನಾಂತರವಾಗಿ ಸಿರೆಗಳಿದ್ದರೆ ಅದನ್ನು ಸಮಾನಾಂತರ ಸಿರಾ ವಿನ್ಯಾಸ (parallel venation) ಎನ್ನುತ್ತೇವೆ.

ಬಾಷ್ಪವಿಸರ್ಜನೆ ಎಂದರೇನು? ದ್ಯುತಿಸಂಶ್ಲೇಷಣೆ ಎಂದರೇನು?
ಎಲೆಯು ಎರಡು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳೆಂದರೆ;1)ಬಾಷ್ಪವಿಸರ್ಜನೆ(transpiration) ಅಂದರೆ ಸಸ್ಯದಲ್ಲಿರುವ ಹೆಚ್ಚುವರಿ ನೀರು ಪತ್ರಪಟಲದಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ ಆವಿಯಾಗುತ್ತದೆ. ಇದನ್ನು ಬಾಷ್ಪವಿಸರ್ಜನೆ ಎನ್ನುತ್ತೇವೆ.
2) ದ್ಯುತಿಸಂಶ್ಲೇಷಣೆ;ಎಲೆಯು ನೀರು, ಸೂರ್ಯನ ಬೆಳಕು, ಕಾರ್ಬನ್ ಡೈಯಾಕ್ಸೈಡ್ ಗಳನ್ನು ಬಳಸಿಕೊಂಡು ಆಹಾರವನ್ನು ತಯಾರಿಸುತ್ತದೆ. ಈ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ(photosynthesis) ಎನ್ನುತ್ತೇವೆ.

  ಈಗ ಬೇರಿನ ಬಗ್ಗೆ ತಿಳಿಯೋಣ.ಬೇರುಗಳಲ್ಲಿ ತಾಯಿಬೇರು(taproot) ಮತ್ತು ತಂತು ಬೇರು(fibrous roots) ಎಂಬ ಎರಡು ವಿಧಗಳಿವೆ.ತಾಯಿ ಬೇರಿನಲ್ಲಿ ಬದಿಗಳಲ್ಲಿರುವ ಸಣ್ಣ ಬೇರುಗಳನ್ನು ಪಾರ್ಶ್ವ ಬೇರುಗಳು ಎನ್ನುತ್ತೇವೆ.
ತಾಯಿ ಬೇರಿರುವ ಸಸ್ಯಗಳ ಎಲೆಗಳು ಜಾಲಿಕ ಸಿರಾ ವಿನ್ಯಾಸವನ್ನು ಹೊಂದಿರುತ್ತವೆ.
ತಂತು ಬೇರುಗಳನ್ನು ಹೊಂದಿರುವ ಸಸ್ಯಗಳಲ್ಲಿ ಎಲೆಗಳು ಸಮಾನಾಂತರ ಸಿರಾ ವಿನ್ಯಾಸವನ್ನು ಹೊಂದಿರುತ್ತವೆ.
 ಕೆಲವೊಂದು ಸಸ್ಯಗಳಲ್ಲಿ ಬೇರುಗಳು ಮಣ್ಣಿನಿಂದ ನೀರು ಮತ್ತು ಖನಿಜಗಳನ್ನು ಹೀರುವುದರ ಜೊತೆಗೆ ಆಹಾರ ಶೇಖರಣೆಯ ಭಾಗವಾಗುತ್ತದೆ.ಸಿಹಿ ಗೆಣಸು,ಮೂಲಂಗಿ, ಕ್ಯಾರೆಟ್ ಗಳು ಇದಕ್ಕೆ ಉದಾಹರಣೆಗಳಾಗಿವೆ.

ಸಸ್ಯಗಳಲ್ಲಿ ಕಾಂಡವು ನೀರು, ಖನಿಜ, ಆಹಾರಗಳನ್ನು ಸಾಗಿಸುವ ಅಂಗಾಂಶಗಳನ್ನು ಹೊಂದಿದೆ.
ಸಸ್ಯಗಳಲ್ಲಿ ಹೂವು ಸಂತಾನೋತ್ಪತ್ತಿಯ ಭಾಗವಾಗಿದೆ.ಹೂ, ಪುಷ್ಪಪತ್ರ, ಪುಷ್ಪದಳಗಳು, ಶಲಾಕೆ, ಕೇಸರಗಳನ್ನು ಹೊಂದಿದೆ.

ಮಂಗಳವಾರ, ಫೆಬ್ರವರಿ 8, 2022

ಉಷ್ಣ ಎಂದರೇನು?

ಉಷ್ಣ(Heat)ವು ಶಕ್ತಿಯ ಒಂದು ರೂಪ.ಒಂದು ವಸ್ತುವಿನ ಉಷ್ಣವು ಆ ವಸ್ತುವಿನಲ್ಲಿರುವ ಅಣುಗಳ ಚಲನ ಶಕ್ತಿಯ(Kinetic energy) ಮೊತ್ತ ಆಗಿರುತ್ತದೆ.ವಸ್ತುವಿನ ಅಣುಗಳು ತಮ್ಮ ಚಲನೆಯ ಕಾರಣದಿಂದ ಗಳಿಸಿಕೊಳ್ಳುವ ಶಕ್ತಿಯನ್ನು ಅವುಗಳ ಚಲನಶಕ್ತಿ ಎನ್ನುತ್ತೇವೆ. ಉಷ್ಣವನ್ನು ಅಳೆಯುವ ಅಂತರಾಷ್ಟ್ರೀಯ ಏಕಮಾನ ಜೂಲ್(joule) ಆಗಿದೆ.
ಉಷ್ಣದ ಪರಿಣಾಮಗಳು ;
ಒಂದು ವಸ್ತುವಿನ ಉಷ್ಣವನ್ನು ಹೆಚ್ಚು ಮಾಡಿದಾಗ ಆ ವಸ್ತು ಹಿಗ್ಗುತ್ತದೆ(ವ್ಯಾಕೋಚಿಸುತ್ತದೆ).
ವಸ್ತುವಿನ ಉಷ್ಣವನ್ನು ಕಡಿಮೆ ಮಾಡಿದಾಗ ವಸ್ತು ಕುಗ್ಗುತ್ತದೆ( ಸಂಕೋಚಿಸುತ್ತದೆ).
ಒಂದು ವಸ್ತುವಿನ ಉಷ್ಣವನ್ನು ಹೆಚ್ಚು ಮಾಡಿದಾಗ  ಅದರ ತಾಪ(temperature)ವೂ ಹೆಚ್ಚಾಗುತ್ತದೆ.
ಒಂದು ವಸ್ತುವಿನ ಅಣುಗಳ ಸರಾಸರಿ ಚಲನಶಕ್ತಿಗೆ ತಾಪ ಎನ್ನುತ್ತೇವೆ.
ಉಷ್ಣ ದಿಂದ ವಸ್ತುಗಳ ಸ್ಥಿತಿ ಬದಲಾವಣೆಯಾಗುತ್ತದೆ.

ನಿತ್ಯ ಜೀವನದಲ್ಲಿ ಉಷ್ಣದ ಪರಿಣಾಮಗಳ ಅನ್ವಯ;
ಎತ್ತಿನ ಗಾಡಿಯ ಮರದ ಚಕ್ರಕ್ಕೆ ಉಕ್ಕಿನ ಪಟ್ಟಿ ಕೂರಿಸಲು ಉಷ್ಣದ ಪರಿಣಾಮವನ್ನು ಅಳವಡಿಸುತ್ತೇವೆ;ಮೊದಲು ಮರದ ಚಕ್ರವನ್ನು ತಯಾರಿಸಲಾಗುತ್ತದೆ.ನಂತರ ಮರದ ಚಕ್ರಕ್ಕಿಂತ ಸ್ವಲ್ಪ ಕಿರಿದಾದ ಉಕ್ಕಿನ ವೃತ್ತಾಕಾರದ ಪಟ್ಟಿಯನ್ನು ತಯಾರಿಸಲಾಗುತ್ತದೆ.ಉಕ್ಕಿನ ಪಟ್ಟಿಯನ್ನು ಚೆನ್ನಾಗಿ ಕಾಯಿಸಲಾಗುತ್ತದೆ.ಕಾಯಿಸಿದಾಗ ಉಕ್ಕಿನ ಪಟ್ಟಿಯ ಪರಿಧಿಯು ಮರದ ಚಕ್ರಕ್ಕಿಂತ ದೊಡ್ಡದಾಗುತ್ತದೆ.ಈಗ ಉಕ್ಕಿನ ಪಟ್ಟಿಯೊಳಗೆ ಮರದ ಚಕ್ರವನ್ನು ಜಾರಿಸಿ ತಕ್ಷಣ  ತಂಪು ಮಾಡಲಾಗುತ್ತದೆ. ತಂಪು ಮಾಡಿದಾಗ ಉಕ್ಕಿನ ಪಟ್ಟಿಯು ಕುಗ್ಗಿ, ಮರದ ಚಕ್ರವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.
ಬಿಗಿಯಾಗಿರುವ ಬಾಟಲಿಯ ಬಿರಡೆಯನ್ನು ಕಳಚಲು ಅದನ್ನು ಲಘುವಾಗಿ ಕಾಯಿಸಿ ಕಳಚಿದರೆ ಸುಲಭವಾಗಿ ಕಳೆದುಕೊಳ್ಳುತ್ತದೆ.ಇಲ್ಲಿ ಕಾಯಿಸಿದಾಗ ಬಾಟಲಿಯ ಬಿರಡಿ ಯು ಹಿಗ್ಗುತ್ತದೆ.
ಹಡಗಿನ ನಿರ್ಮಾಣದಲ್ಲಿ ರಿವೆಟ್ ಜೋಡಣೆಯಲ್ಲಿ ಉಷ್ಣದ ಪರಿಣಾಮವನ್ನು ಅನ್ವಯಿಸುತ್ತೇವೆ.
ತಾಪಮಾಪಕಗಳ ತಯಾರಿಕೆಯಲ್ಲಿ ಉಷ್ಣದ ಪರಿಣಾಮವನ್ನು ಅನ್ವಯಿಸುತ್ತೇವೆ.

ಉಷ್ಣದ ಏಕಮಾನಗಳು;
ಉಷ್ಣದ ಅಂತರಾಷ್ಟ್ರೀಯ ಏಕಮಾನ ಜೂಲ್(joule) ಆಗಿದೆ.
ಕ್ಯಾಲರಿ ಯು ಉಷ್ಣದ ಇನ್ನೊಂದು ಏಕಮಾನ .ಒಂದು ಕ್ಯಾಲರಿ ಯೂ 4.2J ಗಳಿಗೆ ಸಮವಾಗಿದೆ.
ಕಿಲೋ ಜೂಲ್ ಮತ್ತು ಕಿಲೋ ಕ್ಯಾಲರಿಗಳು ಕೂಡ ಉಷ್ಣದ ಏಕಮಾನಗಳಾಗಿವೆ.ಕಿಲೋ ಎಂದರೆ ಸಾವಿರ ಎಂದರ್ಥ.

8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3

ಕಲಿಕಾ ಫಲ 3   ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು.   ಕಲಿಕಾ ...